Saturday, July 18, 2009

ಅಪರಾಧಿ ನಾನಲ್ಲ........

ಬೆಂಗಳೂರಿಗೆ ವರ್ಗಾವಣೆಯಾಗಿ ಬಂದು ಸುಮಾರು ೩ ತಿಂಗಳಾಯ್ತು! ಬಂದಾಗಿಂದ, ಬ್ಲಾಗಿಗೆ ಬರಗಾಲ ಬಂದಿದೆ ಅಂತ ಅನ್ನಿಸ್ತಿದೆ. ಇದಕ್ಕೆ ಬ್ಲಾಗ್ ಓನರ್ ಕಾರಣ ಅಂತ ಅನ್ಕೊಳ್ಬಾರ್ದು ಅಂತ ನನ್ನ ಸವಿನಯ ಮನವಿ! ಬರೀಬೇಕು ಅಂತ ಬಹಳ ಸರ್ತಿ ಯೋಚನೆ ಮಾಡ್ದೆ, ಆದರೆ, ಯೋಜನೆ, ಯೋಚನೆ ಹಂತದಲ್ಲೇ ನಿಂತ್ಕೊಂಡುಬಿಡ್ಬೇಕೇ!! ಅದಕ್ಕೂ ಕಾರಣ ನಾನಲ್ಲ! ಊರು, ನಮ್ಮೂರಾದ್ರೂ, ಕೆಲ್ಸ ಅಂತ ಇರುತ್ತೆ ನೋಡಿ! ಹೊಸ ಕಡೆ, ಹೊಸ ವಾತಾವರಣ, ಅಲ್ಲಿನ ಬೇಡಿಕೆಗಳು, ಇವೆಲ್ಲ ತಲೆ ತುಂಬ. ಅದೂ ಅಲ್ದೆ, ಆ ಕಾಟ್ ಜಾಗದಿಂದ ಇನ್ನೂ ಪೂರ್ತಿಯಾಗಿ ಸಾಮಾನುಗಳನ್ನೆಲ್ಲ.. ಸಾಗಿಸಿರ್ಲಿಲ್ಲ.. ಒಂದೆರಡು ವಾರ ಅದರ ಓಡಾಟ ಆಯ್ತು, ಅದಾದ್ಮೇಲಾದ್ರೂ ಬರೀಬಹುದಿತ್ತಲ್ಲ ಅಂತ ಕೇಳ್ತೀರ... ನಿಜವೇ... ಆದ್ರೆ, ವಾರಾಂತ್ಯದಲ್ಲೇ ಬರೀಬೇಕು ಅಂತ.. ಏನೋ ಒಂದು ಚಟ.. ಯಾವಾಗ್ಲೋ ಬರೋ ಯೋಚನೆಗಳಿಗೆಲ್ಲ, ವಾರಾಂತ್ಯದಲ್ಲೇ ಬಾ..ಅಂತ ಹೇಳಿದ್ರೆ.. ಅವೂ ನನ್ಮಾತು ಕೇಳ್ಬೇಕಲ್ಲ! ತಮ್ಮದೇ ಹಟ...ತಮ್ಮದೇ ದಾರಿ ಇವಕ್ಕೆ!

ವಾರಾಂತ್ಯ ನನಗೊಬ್ಬನಿಗೇ ಅಂತಂದ್ರೆ, ಅದೊಂದು ವಿಷ್ಯ, ಆದರೆ, ಅದು ಎಲ್ಲರಿಗೂ ವಾರಾಂತ್ಯನೇ ಅಲ್ವ?! ಸರಿ, ಬರೆಯೋದರ ಜೊತೆಗೆ, ಸುತ್ತಾಡೋದು, ಮಾತಾಡೋದು, ಬಂಧು, ಬಳಗ ಎಲ್ಲ ಸೇರ್ಕೊಂಡು ಬಿಡುತ್ವೆ, ಏತನ್ಮಧ್ಯೆ, ಡಿ.ವಿ.ಜಿ ಅವರು ಹೇಳೋ ಹಾಗೆ, ತಲೆನಲ್ಲಿ ಕಾಗೆ, ಗೂಬೆ, ಕೋಗಿಲೆ, ನವಿಲು, ಗುಬ್ಬಚ್ಚಿ, ಎಲ್ಲಾ ಕೂಗುಗಳು ಸೇರಿ ಹೋಗಿ, ಈ ಗದ್ದಲದಲ್ಲಿ, ಪಾಪ ಬರವಣಿಗೆಗೆ ಬೇಕಿರೋ ಸ್ಫೂರ್ತಿ ಅನ್ನೋ ಮರಿಯ ಸದ್ದು ಎಲ್ಲೋ ಅಡಗಿಹೋಗುತ್ತೆ! ಈ ಮರಿ ಬೆಳೆದು, ಆ ಬೇರೆ ಎಲ್ಲಾ ಗದ್ದಲಗಳನ್ನೂ ಮೀರಿ ಗಲಾಟೆ ಮಾಡೋಕೆ, ಇಷ್ಟು ದಿನ ಬೇಕಾಯ್ತು ನೋಡಿ!

ಅಂತೂ, ಇಂತೂ ಸದ್ಯ ಬಂತಲ್ಲ!! ಏನೋ ಒಂದಷ್ಟು ಮಾತುಗಳಿಗೆ, ಪದಗಳ ರೂಪ ಕೊಟ್ಟು, ಕೀಲಿಮಣೆ ಮೇಲೆ ಟಕಟಕಿಸಿದ್ದು ಆಯ್ತು. ಇನ್ಮುಂದೆ, ಹೀಗೆಲ್ಲ, ಧೂಳು ಹಿಡಿಯೋಕೆ ಆಸ್ಪದ ಕೊಡಲ್ಲ... ಏನೋ ಒಂದು... ಹರಟ್ತಾಯಿರ್ತೀನಿ... ಕೇಳೋದು, ಓದೋದು.. ನಿಮಗೆ ಬಿಟ್ಟಿದ್ದು ಅಷ್ಟೇ! :)

1 comment:

  1. ಏನೋ ಎಂತೋ, ಅಂತೂ ಬಂದ್ಯಲ್ಲ, ಬರ್ದ್ಯಲ್ಲ! ಸದ್ಯಕ್ಕೆ ಅಷ್ಟು ಸಾಕು. ಹೀಗೇ ಒಂದೊಂದೇ ಹೆಜ್ಜೆ ಮುಂದುಮುಂದಕೆ ಸಾಗಿ ಬಾ... ಜೊತೆಗೆ ನಾವಂತೂ ಇದ್ದೇವೆ.

    ReplyDelete