Monday, March 23, 2009

ಬಂತು ಯುಗಾದಿ ಹಬ್ಬ......

ಮನುಷ್ಯ ತನ್ನನ್ನ ತಾನೇ ಎಷ್ಟೇ ಹೊಗಳಿಕೊಂಡ್ರೂ, ಪ್ರಕೃತಿಗೆ ಬಹುಶಃ ಮನುಷ್ಯನನ್ನ ಲೇವಡಿ ಮಾಡೋ ಆಸೆ ಇತ್ತೋ ಏನೋ ಕಾಣೆ! ದ.ರಾ.ಬೇಂದ್ರೆ ಅವರು ಹೇಳೋ ಹಾಗೇ... ನಮಗೆ ಮಾತ್ರ ಒಂದೇ ಒಂದು ಜನ್ಮ, ಅದರಲ್ಲೂ, ಒಂದೇ ಬಾಲ್ಯ, ಒಂದೇ ಹರೆಯ, ... ಆದರೆ ಪ್ರಕೃತಿಯಲ್ಲಿ ಹಾಸು ಹೊಕ್ಕಾಗಿರೋ ಗಿಡ ಮರಗಳಿಗೆಲ್ಲ..? ಯುಗ ಯುಗಾದಿ ಕಳೆದರೂ, ಮರಳಿ ಬರೋ ಯುಗಾದಿಯ ಕೊಡುಗೆ! ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆ.. ಇವರಿಗೆಲ್ಲ! ವಸಂತನ ಆಗಮನವಾಗಿ ಎಲ್ಲ ಹೊಂಗೆ ತೊಂಗೆಯಲ್ಲಿ ಸಂತಸ ತುಂಬಿ ನಲಿಯುವ ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಬರ್ತಾಯಿದೆ. ಇಡೀ ಸೃಷ್ಟಿ ನವನವೋಲ್ಲಾಸದಿಂದ ಕಂಗೊಳಿಸ್ತಾಯಿದ್ರೆ, ಮನುಷ್ಯ, ನಕ್ಷತ್ರಗಳನ್ನ, ಗ್ರಹಗಳನ್ನ, ಲೆಕ್ಕ ಹಾಕಿ ಬರೋ ವರ್ಷದ ಫಲದಲ್ಲಿ ಮೈ ಮರೆತಿರ್ತಾನೆ!
ಪಂಚಾಂಗ, ಜಾತಕಗಳೆಲ್ಲ ಹೊರಗೆ ಬಂದಿರುತ್ತೆ... ಜೊತೆಗೆ, ಎಲ್ಲ ಜ್ಯೋತಿಷ್ಯರ ಮನೆ ಮುಂದೆ ಸರತಿಯ ಸಾಲು. ಈಗೀಗ ಅದಿಲ್ಲ ಬಿಡಿ, ಎಲ್ಲ ಚಾನೆಲ್ನಲ್ಲಿ ಬರುತ್ತೆಲ್ಲ... ಅಲ್ಲಿಗೆ ಫೋನ್ ಮಾಡಿದ್ರೆ ಕಥೆ ಮುಗೀತು! ಮರಗಳಿಗೆ ಇದರ ಚಿಂತೆ ಇದೆಯೆ? ಮನುಷ್ಯ ತನ್ನ ಬಗ್ಗೆ ತಾನೇ ಅದೆಷ್ಟೇ ಬೀಗಿದ್ರೂ, ಪ್ರಕೃತಿಯ ಮುಂದೆ ಅದೆಷ್ಟು ಕುಬ್ಜ ಆಗ್ಬಿಡ್ತಾನೆ ಅಲ್ವ? ಆಯಾ ಮಾಸಕ್ಕೆ, ಆಯಾ ಋತುವಿಗೆ ಅನುಗುಣವಾಗಿ ಎಲ್ಲವೂ ನಡೆಯುತ್ವೆ! ಮನುಷ್ಯನನ್ನ ಬಿಟ್ಟು! ಬೇಸಿಗೆಯಲ್ಲಿ, ಚಳಿಯನ್ನ, ಚಳಿಗಾಲದಲ್ಲಿ ಬಿಸಿಲನ್ನ ಬಯಸೋ ವಿಚಿತ್ರ ಪ್ರಾಣಿ ಅಂದ್ರೆ ಮನುಷ್ಯ ಒಬ್ನೇ! ಕಷ್ಟ ಬಂದಾಗ ಸುಖ ಬಯಸ್ತೀವಿ, ಸುಖ ಬಂದಾಗ, ಮತ್ತಷ್ಟೂ ಹೆಚ್ಚು ಸುಖ. ನಮ್ಮ ಮನಸ್ಸಿಗೆ ಒಪ್ಪಿಗೆ ಆಗೋದೊಂದೇ ಒಳ್ಳೇದು, ಮಿಕ್ಕಿದ್ದೆಲ್ಲಾ ಕೆಟ್ಟದ್ದು! ಪ್ರಕೃತಿನಲ್ಲಿ ಎಲ್ಲಕ್ಕೂ ಸ್ಥಾನ ಇದೆ. ಅದು ಒಳ್ಳೇದು ಕೆಟ್ಟದ್ದು ಅನ್ನೋ ತುಲನೆ ಮಾಡೊಲ್ಲ! ನಿಜವಾದ ನಿರ್ಗುಣೆ! ದಿಟವಾಗಿ ಸ್ಥಿತಪ್ರಜ್ಞೆ! ಯುಗಾದಿಯ ಮಹತ್ವ ಕೂಡ ಇದರಲ್ಲೇ ಅಡಗಿರೋದು! ಬೇವು ಬೆಲ್ಲ... ಜೊತೆಯಾಗಿ ಸವಿಬೇಕು. ಕಷ್ಟ ಸುಖ ಜೊತೆಯಾಗಿ ಸಮನಾಗೆ ಸ್ವೀಕರಿಸಬೇಕು. ಯುಗಾದಿ ಬಂದಾಗ ಪ್ರಕೃತಿಯೊಂದೇ ಅಲ್ಲ, ಮನುಷ್ಯ ಸಹಿತ ಮನಸ್ಸಿನಲ್ಲಿ ಪುನಃ ಹೊಸದಾದ ಜೀವನವನ್ನ ಪಡೀಬೇಕು! ಕಷ್ಟ ಬಂದಾಗ ಕುಗ್ಗದೆ, ಪುನಃ ಬರುವ ವಸಂತನ ಆಗಮನಕ್ಕೆ ಕಾದಿದ್ದು, ಸಂತೃಪ್ತಿಯ ಕಾಲ ಕೂಡಿಬಂದಾಗ, ಚಿಗುರೊಡೆದು ಜೀವನವನ್ನ ಸಿಂಗರಿಸಿಕೊಳ್ಳಬೇಕು! ಆ ವಸಂತನ ಆಗಮನಕ್ಕೆ ಚಳಿಗಾಲ ಇರಲೇ ಬೇಕಲ್ಲವೆ? ದಿನ ನಿತ್ಯವೂ ಯುಗಾದಿ ಆದಾಗ, ನಿತ್ಯೋತ್ಸವ ಆಗುತ್ತೆ! ಅದು ಮನುಷ್ಯನೊಳಗಿನ ದೈವ್ಯಕ್ಕೆ ನಿತ್ಯೋತ್ಸವ! ಇದೂ ಯುಗಾದಿಯ ಸಂದೇಶವೇ!

Wednesday, March 11, 2009

ಹುಚ್ಚು ಮನಸಿನ ಹತ್ತು ಯೋಚನೆಗಳು

ಬಹಳ ದಿನಗಳಾಯ್ತು. ಏನೂ ಬರೆದಿಲ್ಲ... ಆಗಲೆ ಎಲ್ಲಾರ್ ಹತ್ರ ಬೈಸ್ಕೊಳ್ಳೋದಾಗ್ತಿದೆ. ತ್ರಿವೇಣಿ ಆಗಲೆ ಒಮ್ಮೆ ಮುಖಕ್ಕೆ ಮಂಗಳಾರತಿ ಎತ್ತಿದ್ರು. ಸುಮ್ನೆ ಬಾಗಿಲ್ನ ತೆಗೆದಿಟ್ಟು ಹೊರಗೆ ಅಲಿಯೋಕೆ ಹೋಗಿದ್ದೀಯೇನೋ ಅಂತ ಬೇರೆ ಬೈದ್ಲು! ಸರಿ... ಬರೆಯೋಕೇನೋ ಕೂತಿದ್ದಾಗಿದೆ.... ಆದ್ರೆ ಏನ್ ಬರೀಲಿ? ಬರಿ ಅಂತ ಹೇಳೋರು, ಬರೆಯೋಕೆ ಸಲಹೆ ಕೂಡ ಕೊಡ್ಬೇಕಪ್ಪ! ಹೀಗಂತಂದ್ರೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ ಹೆಂಡ್ತಿ ಅಂದ ಹಾಗಾಗುತ್ತೆ. ಯೋಚ್ನೆ ಮಾಡ್ಬೇಕಾದ್ದೆ! ಸ್ವಲ್ಪ ಮನೆ ಕೆಲ್ಸ ಮುಗಿಸ್ತೀನಿ, ಅಷ್ಟರಲ್ಲಿ ಏನಾದ್ರೂ ಹೊಳೆದಿರುತ್ತೆ.
ಅಡಿಗೆ ಏನ್ ಮಾಡೋದು? ನಿನ್ನೆ ತಾನೆ ಅನ್ನ, ಹುಳಿ ಅಂತ ಆಯ್ತು... ಇವತ್ತೂ ಅದನ್ನೇ ಮಾಡ್ಬೇಕು ಅಂದ್ರೆ ಬೋರ್ ಹೊಡೆಯುತ್ತೆ....ಹೌದು... ಈ ಬೋರ್ ಯಾಕೆ ಹೊಡಿಯುತ್ತೆ ಅಂತ? ಸುಮ್ನೆ ಇರೋಕಾಗೊಲ್ವೇನೊ ಅದಕ್ಕೆ! ಅದರ ಹತ್ರ ಹೊಡಿಸ್ಕೊಳ್ಳೋ ಹಣೆಬರಹ ಬೇರೆ ನಂದು! ಚಪಾತಿ ಮಾಡೋದ? ನಾಳೆ ಬೇರೆ ಫ಼್ರೆಂಡ್ ಬರ್ತಿದಾನೆ... ಆಗಲೆ ಮಾಡಿದ್ರಾಗುತ್ತೆ! ಇವತ್ತು ಬಟ್ಟೆ ಬೇರೆ ಒಗೀಬೇಕು... ಸುಮ್ನೆ ನೂಡಲ್ಸ್ ಮಾಡ್ಕೊಳ್ಳೋದು ಒಳ್ಳೇದು! ಬೇಗ ಆದ್ರೂ ಆಗುತ್ತೆ... ಆಮೇಲೆ ಬಟ್ಟೇ ಒಗ್ದು.. ಬರೆಯೋಕೆ ಕೂತ್ಕೋಬಹುದು......

ಬರಿ ನೂಡಲ್ಸ್ ಹೊಟ್ಟೆ ತುಂಬ್ತಿಲ್ವೆ! ಇನ್ನೇನ್ ಮಾಡ್ಕೊಳ್ಳೋದು! ಅನ್ನಕ್ಕೆ ಇಟ್ರೆ ಜಾಸ್ತಿ ಆಗುತ್ತೆ! ಸುಮ್ನೆ ವೇಸ್ಟು. ಬಾಳೆಹಣ್ಣಿಗೆ ಸ್ವಲ್ಪ ಜೇನ್ತುಪ್ಪ ಹಾಕಿ ರಸಾಯನ ಮಾಡ್ಕೊಂಡು ತಿನ್ಬೇಕು ಅಷ್ಟೇ.... ಸುಮ್ನೆ ಹಾಗೇ ಊಟ ಮಾಡೋದ! .... ಲಾಪ್ಟಾಪ್ ನಲ್ಲಿ ಮೂವಿ ನೋಡೋದ.... ಇಲ್ಲ ಪುಸ್ತಕ ಓದೋದ? ಸುಮ್ನೆ ಮೂವಿ ಹಿಡ್ಕೊಂಡ್ರೆ.. ಸಮಯ ಹೋಗೋದೇ ಗೊತ್ತಾಗೊಲ್ಲ... ಬಟ್ಟೆ ಬೇರೆ ಒಗೀಬೇಕು. ಬುಕ್ ಓದೋದು.. ಬೆಸ್ಟು... ಯಾವ್ದನ್ನ ಓದ್ಲಿ?..... ಪಿ.ಜಿ. ವೋಡ್ ಹೌಸ್ ದು ಇದೆ... ಅದನ್ನ ನಿದ್ದೆ ಮಾಡ್ಬೇಕಾದ್ರೆ ಓದೋದು.. ಒಳ್ಳೇದು... ಸಕ್ಕತ್ ಅಲ! ನಿದ್ದೆ ಮಾಡ್ಬೇಕಾದ್ರೆ.. ಓದೋಕೆ ಆಗುತ್ತ! ಅದೇನ್ ಮಾತೋ! ನಿದ್ದೆ ಮಾಡೋಕೂ ಮುಂಚೆ ಓದಿದ್ರಾಯ್ತು! ಊಟ ಮಾಡೋ ಸಮಯದಲ್ಲಿ ಊಟಕ್ಕೆ ಗಮನ ಕೊಡ್ಬೇಕಂತೆ... ಕಷ್ಟ.. ಕಷ್ಟ....ಯಾವ್ದೂ ಬೇಡ...ಸುಮ್ನೆ ಹಾಡು ಹಾಕ್ಕೊಂಡು... ಕೇಳೋಣ.... "ನೀರಿನಲ್ಲಿ ಅಲೆಯ ಉಂಗುರ... ಭೂಮಿ ಮೆಲೆ ಹೂವಿನುಂಗುರ... "... ಸಕ್ಕತ್ ಹಾಡು.. ಚೆನ್ನಾಗಿದೆ.. ಚೆನ್ನಾಗಿದೆ... "ಮನ ಸೆಳೆದ ನಲ್ಲ.. ಕೊಟ್ಟನಲ್ಲ.. ಕೆನ್ನೆ ಮೇಲೆ ಪ್ರೀತಿಯುಂಗುರ.." ಏನ್ ಲೈನ್ಸು! ಸಕ್ಕತ್ ಅಲ... ಹುಡುಗಿ.. ಹೇಳಿದ್ರೆ.. ಪರ್ವಾಗಿಲ್ಲ.... ಇದೇನಿದು.. ಹುಡುಗನೂ ಅದನ್ನೇ ಹೇಳ್ತಿದಾನೆ!! ಎಡ್ವಟ್ಟು.... ಬರೀ ಉಂಗುರನೇ ಇದೆ.. ಹಾಡಿನ್ತುಂಬ.... ಹೆ ಹೆ ಹೆ.. "ಆಗಿ ನಿನ್ನ ಕೈಯ ಪಂಜರ... ನನ್ನ ಹೃದಯ ಒಂದು ಡಂಗುರ".... ಉಂಗುರಗೆ.. ಹೊಂದ್ಲಿ.. ಅಂತ.. ಬರೆದ್ರು.. ಅನ್ಸುತ್ತೆ... ಒಳ್ಳೇ ತಮಾಷೆ!! ಹೆ ಹೆ ಹೆ....
ಅಯ್ಯೋ!! ಟೈಮ್!! ಛೆ! ಮರ್ತೇ ಹೋಯ್ತು! ಬಟ್ಟೆ ನನೆಸಿ ಎಷ್ಟು ಹೊತ್ತಾಯ್ತು!!! ರಾತ್ರಿ ಬೇರೆ... ಮತ್ತೆ ನಿದ್ದೆ ಮಾಡೋದು ಲೇಟ್ ಆಗುತ್ತೆ... ಆಮೇಲೆ ಏಳೋದು.. ಲೇಟು... ದಡ ಬಡ ಅಂತ.. ಮತ್ತೆ ಓಡೋದು ಕೆಲ್ಸಕ್ಕೆ... ಸರಿ ಇಲ್ಲ... ಎಷ್ಟು ದಿನದಿಂದ... ಜಾಗಿಂಗ್ ಹೋಗೋಣ ಅಂತ ಅನ್ಕೊಳ್ತಿರೋದು! ನೀನು ಹೋಗೊಲ್ಲ.. ಅದು ಆಗೊಲ್ಲ ಬಿಡು! ಅದೂ ಬೀಚ್ಗೆ ಹೋಗಿ ಜಾಗಿಂಗ?!! ದೇವ್ರಿಗೇ ಪ್ರೀತಿ! ಛೆ! ಛೆ! ನಾನೇ ಹೀಗಂನ್ಕೊಂಡ್ರೆ!! ನೋ ವೇ! ಮಾಡೋಣ.. ಮಾಡೋಣ... ಟೈಮ್ ಬರುತ್ತೆ... ಕಾಲ ಬರ್ಬೇಕು ಅಷ್ಟೆ... ಈಗ ಮನೆ ಕೆಲ್ಸ ಮಾಡ್ತಿಲ್ವ! ಅದೇ ಜಾಗಿಂಗ್ ಥರ ಅಂತ ಅನ್ಕೊಳ್ಳೋದಪ್ಪ! ಈಗ್ಲೇ ಎಷ್ಟು ಸಣ್ಣ ಆಗಿದೀನಿ... ಇನ್ನೇನ್ ಆಗ್ಬೇಕು... ಬೈಸೆಪ್ಸ್ ಬರ್ಬೇಕು ಅಷ್ಟೇ... ಅದೂ ಬರುತ್ತೆ...

ಈ ಬಟ್ಟೆ ಒಗೆಯೋ ಕೆಲ್ಸ ಬೇರೆ! ಇದೆಲ್ಲ ನೋಡಿದ್ರೆ.. ಬಟ್ಟೆ ಯಾಕೆ ಬೇಕಿತ್ತು ಅನ್ಸುತ್ತೆ! ಒಂದು ವಾಷಿಂಗ್ ಮಷಿನ್ ತಗೊಳ್ಳೋಣ ಅಂದ್ರೆ.. ಬಡ್ಡೀ ಮಗಂದು.. ಕಂಪನಿ.. ಕೊಡೋ ಸಂಬ್ಳದಲ್ಲಿ.. ಅದಕ್ಕೆಲ್ಲಿ ಹೋಗ್ಲಿ! ದಿನಾ ಅನ್ಕೊಳ್ಳೋದು.. ಸ್ವಲ್ಪ ಸ್ವಲ್ಪ.. ನಿತ್ಯ ಒಕ್ಕೋಳೋಣ ಅಂತ.. ಬರೀ ಅನ್ಕೊಳ್ಳೋದೇ ಆಗ್ತಿದೆ.. ಬಿಡು... ಬೇಗ ಒಗ್ದು.. ಅದೇನ್ ಬರೆಯೋದೋ.. ಯೋಚ್ನೆ ಮಾಡ್ಬೇಕು... ತಲೆನೇ ಓಡ್ತಿಲ್ಲ... ಸರಿ ಹೋಯ್ತು.. ಫೋನ್ ಬಂತು... ಕೈಯೆಲ್ಲ.. ಒದ್ದೆ... ಹೇಗೆ ಎತ್ಕೊಳ್ಳೋದು... ಯಾರೋ ಏನ್ ಕಥೆನೋ... ಆಮೇಲೇ ನೋಡಿದ್ರಾಯ್ತು... ಬಟ್ಟೆ ಒಣಗಿ ಹಾಕ್ಬೇಕು... ಮೊದ್ಲು. ಅಪ್ಪ! ಅದೇನ್ ಕೈ ನೋವು!! ಅದ್ಯಾವಾಗ.. ಈ ಜಾಗದಿಂದ ತಪ್ಪಿಸ್ಕೊಳ್ತೀನೋ!! ದೇವ್ರಿಗೇ ಗೊತ್ತು...

ಏನ್ ಬರೆಯೋದು... ಛೆ! ಮೊದ್ಲು.. ಎಷ್ಟೊಂದು.. ಬರೀತಿದ್ದೆ... ಕಂಬಿ ಇಲ್ದೆ ರೈಲ್ ಬಿಡ್ತಿಯ ಅಂತ ಹೇಳಿದ್ರು.. ಲೆಚ್ಚರರ್! ಈಗ.. ಕಂಬಿ ಹಾಕಿದ್ರು.. ರೈಲು.. ಪ್ಲಾಟ್ಫ಼ಾರ್ಂ ಬಿಟ್ಟು ಮುಂದಕ್ಕೇ ಹೋಗ್ತಿಲ್ಲ... ತಲೆ ತುಂಬ.. ಬರೀ ಅದೂ ಇದೂ.. ಹರಟೆ... ಎಲ್ಲಿಂದ ಬರ್ಬೇಕು ಐಡಿಯಾ?!! ಸಕ್ಕತ್ ಅಲ... ತಲೆನೋವು ಬೇರೆ... ದುರ್ಭಿಕ್ಷದಲ್ಲಿ ಅಧಿಕಮಾಸವಂತೆ.... ಅಂದ್ರೆ.. ನನ್ ತಲೆ ನಲ್ಲಿ ಮಾಸ್ ಜಾಸ್ತಿ ಆಯ್ತು ಅಂತ... ಎಲ್ಲಿ ತೆಗೀಲಿ ಮಾಸ್ ನ! ಏನ್ ಯೋಚನೆಗಳಪ್ಪ.. ಲಂಗು.. ಲಗಾಮಿಲ್ದಿರಾನೇ ಓಡ್ತಿರುತ್ತೆ.... ಇವತ್ತು ಬೇಡ... ನಾಳೆ ಸ್ವಲ್ಪ ಸೀರಿಯಸ್ಸಾಗಿ.. ಯೋಚ್ನೆ ಮಾಡಿ.. ಏನಾದ್ರೂ ಬರೆಯೋಣ..... ಈಗ ನಿದ್ದೆ ಮಾಡಿದ್ರಾಯ್ತು...