Thursday, February 26, 2009

ಏಕೆ ಬಾರದಿಹನೆ ಸಖಿ ಮಾಧವನು ...?

ಏಕೆ ಬಾರದಿಹನೆ ಸಖಿ ಮಾಧವನು?
ಎನ್ನ ವಿರಹ ತಿಳಿಯನೇನೆ ಪ್ರಿಯ ಸಖನು?


ಪೂರ್ಣ ಚಂದ್ರನಿರುವಿನಲ್ಲಿ ಕೊಳಲನೂದಿ ಕರೆದನಿಲ್ಲಿ
ಎನ್ನ ಉಸಿರ ಬಿಸಿಯ ತಾಪಕವನ ಉಸಿರ ಬೆರೆಸಲಿಲ್ಲಿ
ಮರವ ಬಳಸಿ ಬೆಳೆವ ಬಳ್ಳಿ ಸುಮವ ಬಿರಿವ ಚಂದದಲ್ಲಿ
ತನುಗಲೆರಡು ಬೆರೆತು ದಿವ್ಯ ಪ್ರೇಮವರಳಲೆಂದ ಕೃಷ್ಣ


ತಿರೆಯ ತಣಿಸೆ ವರ್ಷ ಧಾರೆ ಮುಗಿಲ ಸೀಳಿ ಸುರಿಯುವಂತೆ
ತನ್ನ ಅಧರ ಸುಧೆಯ ಸುರಿಸಿ ಎನ್ನ ಮನವ ತಣಿಪನಂತೆ
ಬಿಗಿದ ರವಿಕೆ ಸಡಿಲಗೊಳಿಸಿ ರಾಧೆ ನಿನ್ನ ಕೇಶ ಬಿಡಿಸಿ
ನಾಚೆ ಮೊಗದ ರಂಗು ನೋಡೆ ಬರುವೆನೆಂದು ನುಡಿದ ಕೃಷ್ಣ


ಭ್ರಮರ ತಾನು ಸುಮವ ಕಂಡು ಮಧುವ ಹೀರಿ ನಲಿಯುವಂತೆ
ರವಿಯ ಕಿರಣ ಸೋಕೆ ಅದರಹೊನಲ ಬೆಳಕಿನಲ್ಲಿ
ಎನ್ನ ವದನ ಕಂಡು ನಿನ್ನ ಮೊಗದ ಕಾಂತಿ ಹೊಳೆಯೆ
ಅದರ ಹೊನಲ ಬೆಳಕಿನಲ್ಲಿ ರಮಿಸೆ ಬರುವೆನೆಂದ ಕೃಷ್ಣ

ನಲಿವ ಯಮುನೆ ತೀರದಲ್ಲಿ ಚಂದ್ರನಿಣುಕಿ ನೋಡದಲ್ಲಿ
ಮೇಘಶ್ಯಾಮನೆದೆಗೆ ಎನ್ನ ಹಣೆಯ ಕೆಂಪೆ ರಂಗವಲ್ಲಿ
ಇಂಥ ನಮ್ಮ ಮಿಲನ ಕಂಡು ಪ್ರಕೃತಿ ತಾನು ಮೋದಗೊಂಡು
ನವ್ಯ ಸೃಷ್ಟಿ ಸೃಜಿಪ ದಿವ್ಯ ನೋಟ ಕಾಣಲೆಂದು ಕೃಷ್ಣ

-ಪ್ರವೀಣ