Tuesday, November 16, 2010

ಚೇತನಕೆ ಹೊಸ ನಿಕೇತನ.....

ನನ್ನದೇ ಆದ ತಾಣವನ್ನು ಕೊಂಡುಕೊಂಡದ್ದಾಯ್ತು, ಇನ್ನು ಮುಂದೆ, ನನ್ನ ಎಲ್ಲ ಲೇಖನಗಳನ್ನು ಅಲ್ಲೇ ಪ್ರಕಟಿಸುತ್ತೇನೆ. ಇಲ್ಲಿ ಬಂದು ಪ್ರೋತ್ಸಾಹಿಸಿದ ರೀತಿ, ಅಲ್ಲೂ ಮುಂದುವರಿಸುವಿರೆಂದು ಆಶಿಸುತ್ತೇನೆ.

ಹೊಸ ಮನೆಗೆ.... ಎಲ್ಲರಿಗೂ ಆದರದ ಸ್ವಾಗತ...... www.praveens.in :)

Tuesday, November 2, 2010

ಶಬರಿ

ಸುಮಾರು ೫ ವರ್ಷಗಳ ಹಿಂದೆ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಪ್ರದರ್ಶನದಿಂದ ಪ್ರಭಾವಿತನಾಗಿ, ಬರೆದ ಒಂದು ನೀಳ್ಗವನ - ಶಬರಿ. ಅಂದಿನಿಂದ ಇಂದಿನವರೆವಿಗೂ ನನ್ನಿಂದ ಇಂತಹ ಮತ್ತೊಂದು ಕವನದ ರಚನೆ ಸಾಧ್ಯವೆ ಎಂದು ಹಲವಾರು ಬಾರಿ ಮನಸ್ಸು ಯೋಚಿಸಿದ್ದುಂಟು. ಇದೂವರೆವಿಗೂ ಸಾಧ್ಯವಾಗಿಲ್ಲವೆಂಬುದು ಸತ್ಯ. ಮುಂದಿನ ದಿನಗಳಲ್ಲಿ ಭಗವತ್ಕೃಪೆಯಿಂದ ಸರಿಯಾದ ಸ್ಫೂರ್ತಿ ಬಂದೊದಗಿ ಮತ್ತೊಮ್ಮೆ ಇಂತಹ ಕವನ ರಚನೆಯಾಗಲಿ ಎನ್ನುವುದು ಒಂದು ಆಶಯ.....

ಶಬರಿ


ಅಂಕ - ೧


ದಟ್ಟ ಕಾನನದ ಹಸಿರ ಒಡಲಲಿ
ನಲಿದು ಹರಿಯುವ ತುಂಗೆ ದಡದಲಿ
ಮನದಿ ಬೆಳಗುವ ಭಕುತಿ ಬೆಳಕಲಿ
ಹೊಳೆವೆ ಆತ್ಮನ ಧರಿಸಿ ಶಬರಿಯು
ಕಾಯುತಿರುವಳು ರಾಮ ತಾ ಬರುವ ಹಾದಿಲಿ ೧



ದೇಹ ಬಾಗಿದೆ ಕಣ್ಣು ಮಂಜಿದೆ
ಸುಕ್ಕು ಮುತ್ತಿದ ತೊಗಲು ಹೊದ್ದಿದೆ
ಅಮಿತ ಆಶೆಯು ಮನದಿ ಹರಿದಿದೆ
"ಎನ್ನ ರಾಮನು, ಎನ್ನ ದೇವನು, ನಿಜದಿ ಬರುವನು!
ಎನ್ನ ಕಾಣ್ವನು ಎನ್ನ ಕಾಯ್ವನು ಸಕಲ ಸದ್ಗುಣಧಾಮನು" ೨



ದಿನವು ಉದಯಿಪ ರವಿಯ ನೋಡುತ
ಬರುವನೆನ್ನಯ ರಾಮನೆನ್ನುತ
ತನ್ನ ನಿತ್ಯದ ಕರ್ಮ ಗೈವಳು
ಬಿದ್ದ ಹಣ್ಗಳ ಆಯ್ದು ತಿಂಬಳು
ಬಿದ್ದ ಹೂಗಳ ಹಾರ ನೇಯ್ವಳು ೩


ಭರದಿ ಸೂರ್ಯನು ರಥವನೋಯ್ದು
ಮುಳುಗೆ ರುಧಿರದ ಹೊದಿಕೆ ನೇಯ್ದು
ಹರಿಸಿ ಕಂಗಳ ಅಶ್ರುಧಾರೆಯ
ಕೂಗಿ ಕರೆವಳು "ರಾಮ ಬಾರೆಯ?
ಮೊಗವ ತೋರೆಯ? ನಿನ್ನ ಸೇವೆಯ ಭಾಗ್ಯ ನೀಡೆಯ? ೪



ಇಂಥ ನಿರ್ಮಲ ಭಕ್ತಿ ಸೆಳೆತವ
ನೋಡಿ ನಲಿಯಲು ಬಂದ ರಾಘವ
ಕಳೆದ ಸೀತೆಯ ಹುಡುಕೊ ನೆಪದಲಿ
ಬಂದ ದೇವನು ಶಬರಿ ಬಳಿಯಲಿ
ಭಕ್ತಿ ಸುಲಭನು ಪಾತ್ರನಾದನು ಭಕ್ತಳಾ ನಿಜ ಲೀಲೆಲಿ ೫


(ಸುರರು ಮುನಿಗಳು ಹುಡುಕಿ
ಅಲೆಯಲು ಕಾಣದಾ ನಿಜ ಮುಕ್ತಿಯು
ಇಂದು ಬಂದಿದೆ ಶಬರಿ ದ್ವಾರಕೆ
ತೋರೆ ಸುಕೃತದ ಶಕ್ತಿಯು )




ಅಂಕ - ೨


ತನ್ನ ದ್ವಾರಕೆ ಬಂದ ರಾಮನ ಕಂಡಳಾಗ ಶಬರಿಯು
"ಬಾರೊ ಕಂದನೆ! ಎನಿತು ಕರೆವಳು ನಿನ್ನನು ನಿನ್ನ ಅಮ್ಮೆಯು?"
ಆಗ ನುಡಿದನು ಶೇಷ ರೂಪನು ತನ್ನ ಅಣ್ಣನ ಗುಣವನು
"ಕೇಳು ತಾಯೆ, ಎನ್ನ ಅಗ್ರಜನೀತ ರಘುಕುಲ ಸೋಮನು"
"ಎನ್ನ ನಾಮವು ಲಕ್ಷ್ಮಣನೆಂಬರು ನಾನೆ ಈತನ ತಮ್ಮನು" ೬



ಆಹಾ! ಆಹಾ! ಏನಿದೇನಿದು ಇಂಥ ಸೊಗಸಿನ ಅಚ್ಚರಿ
ಶುದ್ಧ ಭಕ್ತಿಗೆ ರಾಮ ಸೇವೆಯು ಲಭಿಸಿದಂತಹ ವೈಖರಿ
ನಾಮ ಕೇಳಿಯೆ ಮಾತು ಹೊರಡದೆ ಅಲ್ಲಿ ಶಬರಿಯು ನಿಂತಳು
ವೇದ ಶಾಸ್ತ್ರಕೆ ಕಾಣದೊಡೆಯನ ಕಣ್ಣ ಮುಂದೆಯೆ ಕಂಡಳು
ಭಕ್ತಿ ಪ್ರೀತಿಯ ಭಾವ ಲಹರಿಲಿ ಆಗ ತಾನು ಮಿಂದಳು ೭



"ಏಕೆ ಅಲ್ಲಿಯೆ ನಿಂತೆ ತಾಯೆ? ಬಾರೆ ಎನ್ನೆಯ ಬಳಿಯಲಿ"
ಎಂದು ರಾಮನು ಕೈಯ ಚಾಚಿದ ಶಬರಿ ಎಡೆಯಲಿ ಪ್ರೀತಿಲಿ
ಊರುಗೋಲನು ಬಿಸುಟು ವೃದ್ಧೆಯು ಆಗ ರಾಮನ ಸೇರಲು
ದೇವದೇವರು ಬಂದು ನಿಂತರು ಇಂಥ ದೃಶ್ಯವ ಕಾಣಲು
ದೇವ ಭಕುತಳ ಯೋಗಮಿಲನದ ಪುಣ್ಯ ಭಾವದಿ ಮೀಯಲು ೮


"ಅಮಿತ ಕಾಲದ ತಪಕೆ ಫಲವನೀವ ಕಾಲವು ಬಂದಿದೆ.
ಕೇಳು ತಾಯೆ ಎಲ್ಲ ಕೊಡುವೆನು ನಿನ್ನ ಮನದೊಳಗೇನಿದೆ?"
ತಾಯಿ ಭಾವವು ಮೂಡಿ ಬಂದಿದೆ ಮೊದಲ ನೋಟದೆ ಮನದಲಿ
ದೇವನೀತಗೆ ಏನ ನೀಡಲಿ ಎಂಬ ದೈನ್ಯತೆ ಜೊತೆಯಲಿ
ದ್ವಂದ್ವ ಭಾವವು ಮೂಡಿ ಹರಿಯಿತು, ಹನಿಯು ಗೂಡಿತು ಕಣ್ಣಲಿ ೯


ಎಲ್ಲ ಅರಿತ ರಾಮಚಂದ್ರನು ಆಗ ಶಬರಿಗೆ ಪೇಳ್ದನು
"ಅಮ್ಮ ನನಗೆ ಹಸಿವೆಯಾಗಿದೆ ನೀಡಲಾರೆಯ ಏನನೂ?"
ಮಾತ ಕೇಳುತ ಮಗುವಿನಂದದಿ ಶಬರಿ ತಾನು ನಲಿದಳು
"ಈಗ ಬರುವೆನು ತಾಳು ಕಂದನೆ" ಎಂದು ರಾಮಗೆ ಪೇಳ್ದಳು
ಜಗವನುಣಿಸುವ ಕಲ್ಪತರುವನು ಉಣಿಸಲೋಸುಗ ಪೋದಳು ೧೦


"ಕೇಳಿ ತರುಗಳೆ ಒಂದು ಬಿನ್ನಪ ಎನ್ನ ದೇವನು ಬಂದಿಹ
ತನ್ನ ಸೇವೆಯ ಗೈವ ಭಾಗ್ಯವ ಇಂದು ಎಮಗೆ ತಂದಿಹ
ಹಸಿದ ರಾಮನ ತಣಿಸಲೋಸುಗ ನೀಡಿ ನಿಮ್ಮೆಯ ಫಲಗಳ
ಪ್ರೀತಿಯಿಂದಲಿ ಇಂತು ಶಬರಿಯು ಕೇಳೆ ಎಲ್ಲ ಮರಗಳ
ಹಣ್ಣ ರಾಶಿಯೆ ಧರೆಗೆ ಇಳಿಯಿತು ಸೇರೆ ರಾಮನ ಕೈಗಳ ೧೧


ತನ್ನ ಸೆರಗಲಿ ಅವನು ತುಂಬುತ ವೃದ್ಧೆ ಶಬರಿಯು ನಲಿದಳು
"ಇಗೋ ದೇವನೆ ಹಣ್ಣ ತಂದೆನು" ಎಂದು ಓಡುತ ಬಂದಳು
ಹಣ್ಣ ರಾಶಿಯ ಕೆಳಗೆ ಸುರಿಯೆ ರಾಮನೊಡ್ಡಲು ಕೈಯನು
"ತಾಳು ರಾಮನೆ! ಏನಿದಾತುರ? ನೋಡ ಬಾರದೆ ಫಲವನು?
ರುಚಿಯದಾವುದು? ಪುಳಿಯದಾವುದು? ತಿಳಿದು ತಿನ್ನು ಹಣ್ಣನು!" ೧೨


ಹಣ್ಣನೊಂದನು ಒರೆಸಿ ರುಚಿಯ ನೋಡೆ ಅದನು ತಿಂದಳು
"ಅಯ್ಯೊ ರಾಮ ಕಹಿ" ಇದೆಂದು ನೀಡಲಾಗದೆ ಬಿಸುಟಳು
ಮತ್ತೆ ಬೇರೆಯ ಹಣ್ಣು ತೆಗೆದು ರುಚಿಸಿ ಚೆನ್ನಿದು ಎನ್ನುತ
ತನ್ನ ಎಂಜಿಲು ಎಂದು ಕಾಣದೆ, ನೀಡೆ "ತಿನ್ನಿದು" ಎನ್ನುತ
ಭಕ್ತವತ್ಸಲ ಮುದದಿ ತಿಂದನು ಮುಗ್ಧ ಭಕ್ತಿಗೆ ಮೆಚ್ಚುತ ೧೩


ಎನಿತು ಸಂತಸ ಜಗವ ತುಂಬಿತು ಸೃಷ್ಟಿ ಚಂದದಿ ನಲಿದಿದೆ
ರಾಮನಿತ್ತಲಿ ಹಣ್ಣ ತಿನ್ನಲು ಜಗದ ಹಸಿವೆಯೆ ಇಂಗಿದೆ!
ಎಂಥ ಪುಣ್ಯದ ಸೊಗಸಿದೆಂದು ಹೇಳೆ ಪದಗಳು ಸಾಲದು
ಬ್ರಹ್ಮ ಇಂದ್ರರೆ ತಪವ ಗೈದರು ಇಂಥ ಭಾಗ್ಯವು ದೊರಕದು
ಕಾಮವಿಲ್ಲದ ಭಕುತಿ ಲಹರಿಯ ಮಹಿಮೆ ಎಂತಹ ಚೆನ್ನದು! ೧೪


ಇನಿತು ಸೇವೆಯ ಪಡೆದ ರಾಮನು "ಕೇಳು ತಾಯೆ ಕಥೆಯನು
ಕಪಟಿ ರಾವಣ ಎನ್ನ ಸೀತೆಯ ಕದ್ದು ಲಂಕೆಗೆ ಒಯ್ದನು!
ಎನಿತು ಅರಸಲಿ ಎನ್ನ ಮಡದಿಯ? ಎನಿತು ಆಕೆಯ ಸೇರುವೆ?"
ಎಂದು ಕೊರಗಿದ ಪ್ರಭುವ ಕಂಡು "ಏಕೆ ಕಂದನೆ ಮರುಗುವೆ?
ಪೋಗು ಪಂಪೆಯ ಮಡಿಲಿನಲ್ಲಿ ಅಲ್ಲಿ ಕಪಿಗಳ ಕಾಣುವೆ ೧೫


"ಅವರ ಸೇರೆ ಸೈನ್ಯ ಕಟ್ಟಿ ಪೋಗು ಸಾಗರ ತೀರಕೆ
ಅದನು ಮೀರೆ ಬಂದು ಸೇರುವೆ ಸ್ವರ್ಣ ನಗರಿಯ ದ್ವಾರಕೆ"
ಇಂತು ರಾಮಗೆ ಯುಕ್ತಿ ಪೇಳುತ ಶಬರಿ ಹಣ್ಗಳನಿತ್ತಳು
ರಾಮ ಸಂತಸದಿಂದೆಲ್ಲವ ತಿನ್ನೆ ಬೆಚ್ಚುತಳೆದ್ದಳು
"ನನ್ನ ಕಣ್ಣೆ ತಗುಲಿತೆನ್ನುತ ದೃಷ್ಟಿಯ ತೆಗೆದಳು ೧೬


ಅಮಿತ ಭಕ್ತಿಯ ಕಂಡ ರಾಮನನುಜ ಕಂಬನಿ ಮಿಡಿದನು
"ಆಹ! ತಾಯೆ! ಇಂದಿಗೆನ್ನೆಯ ಗರ್ವವಿಂಗಿದೆ" ಎಂದನು
"ಎನ್ನ ಭಕುತಿಯೆ ಸರ್ವ ಶ್ರೇಷ್ಠವು ಎಂಬ ಭಾವದಿ ಬೀಗಿದೆ
ದಿಟವದಾವುದು ಸಟೆಯದಾವುದು ಎಂದು ನೀನು ತೋರಿದೆ
ತಿಮಿರ ತುಂಬಿದ ಮನದೊಳಿಂದು ಭಕ್ತಿ ಜ್ಯೋತಿಯ ಬೆಳಗಿದೆ ೧೭


ದೇವ ವರದನು ಪಿಡಿದು ಶಬರಿಯನೆತ್ತಿ ಶಿರವನು ಸವರುತ
"ಹೇಳು ತಾಯೆ ಇನ್ನು ಇಹುದೆ ನಿನ್ನ ಮನದೊಳು ಇಂಗಿತ?
ಸಪ್ತ ಲೋಕವ ತಂದು ನಿನ್ನೆಯ ಪಾದತಳದಲಿ ಹಾಕುವೆ
ದೇವದೇವರ ಸಿರಿಯೆ ಶಚಿಯರ ಕೈಲಿ ಸೇವೆಯ ಗೈಸುವೆ
ಅಖಿಲ ಪುಣ್ಯವ ಸಕಲ ಭಾಗ್ಯವ ನಿನ್ನ ಮಡಿಲಲಿ ಇರಿಸುವೆ ೧೮


ಇಂತು ರಾಘವ ನುಡಿಯೆ ಶಬರಿಯು ನಗುತ ತಲೆಯನು ಆಡಿಸಿ
"ಪುಟ್ಟಿ ಬಂದಿಹುದೆನ್ನ ದೇಹವು ಎನಿತು ಜನುಮವ ಸವೆಯಿಸಿ
ಇನ್ನು ಎನ್ನೊಳು ಮೋಹವಿಹುದೊ ಎಂದು ಕಾಣ್ಬೆಯ ಪರಕಿಸಿ?
ಏಕೆ ಎನ್ನೊಳಗಿಂತು ಕೋಪವು ತೋರಬಾರದೆ ದಯೆಯನು?
ದೇವದೇವನೆ ಸಾಕು ಭವವು ನೀಡು ಮುಕುತಿ ಪದವನು ೧೯


ಅಂಕ - ೩

ನುಡಿಯ ಕೇಳುತ ದಿವಿಜರೊಡೆಯನು ಮನದೆ ಸಂತಸಗೊಂಡನು
ಭಕ್ತಳಿಂಥವಳನ್ನು ಪಡೆದಿಹ ನಾನೆ ಎಂತಹ ಧನ್ಯನು!
ದೈನ್ಯ ಭಾವದೆ ಶಬರಿ ಬಾಗುತ ರಾಮ ಪಾದವ ಪಿಡಿದಳು
ಅಶ್ರುಧಾರೆಯ ಪುಣ್ಯ ಜಲದಲಿ ಹರಿಯ ಚರಣವ ತೊಳೆದಳು
ವಿಶ್ವ ಮೋಹನ ಸತ್ಯ ಸುಂದರ ದಿವ್ಯ ದರ್ಶನ ಪಡೆದಳು ೨೦

ನೋಡ ನೋಡುತ ರಾಮ ದೇಹವು ನೀಲಿ ಆಗಸ ಮುಟ್ಟಿದೆ
ಭುವನವೆಲ್ಲವು ಸಕಲ ಸೃಷ್ಟಿಯು ಹರಿಯ ದೇಹದಿ ಕಂಡಿದೆ
ಶಂಖ ಚಕ್ರವ ಗದೆ ಪದ್ಮವ ಧರಿಸಿದಂತಹ ರೂಪವು
ರವಿಯು ಸಾಸಿರ ಉದಿಸಿಬಂದಿರುವಂಥದೆಂತಹ ದಿವ್ಯವು
ಎಲ್ಲ ದೇವರು ಅಲ್ಲಿ ಸೇರಿರೆ ಹಿಂದೆ ಇಹನಲ ಶೇಷನು ೨೧

ಎಂಥ ಅನುಪಮ ಎಂಥ ಮೋಹಕ ನೀಲ ವರ್ಣದ ದೇಹವು
ಪೂರ್ಣ ಚಂದ್ರಮನಂತೆ ಬೆಳಗುತ ತಂಪನೆರೆಯುವ ತೇಜವು
ಕಮಲ ವದನವು ಮಿನುಗೊ ಕೌಸ್ತುಭ ಜೊತೆಯೊಳಭಯ ಹಸ್ತವು
ನೀಲ ದೇಹದ ಉಡುಗೆ ತೊಡುಗೆಯು ಮಿನುಗೊ ಪೀತದ ವರ್ಣವು
ಪರಮ ಪದದ ರೂಪ ಕಾಣುತ ಶಬರಿ ಕಂಗಳು ತಣಿದವು ೨೨

ತನ್ನ ಶಿರವನು ಪಾದತಳದಲಿ ಇಟ್ಟು ಕಂಬನಿ ಮಿಡಿಯುತ
"ಎಷ್ಟು ಕರುಣೆಯು ದೀನ ಬಂಧುವೆ ನಿನಗೆ ಎನ್ನೊಳು" ಎನ್ನುತ
"ಇಂದಿಗೆನ್ನೆಯ ಜನುಮ ಸಾರ್ಥಕ ಇಂದು ತಪವು ಫಲಿಸಿತು
ವೇದ ಓದದೆ, ಶಾಸ್ತ್ರ ಪೇಳದೆ, ನಿನ್ನ ದರುಶನ ಲಭಿಸಿತು
ರಾಮ ನಾಮದ ಮಹಿಮೆ ಎಂಥದು ಎಂದು ಲೋಕವೆ ಕಂಡಿತು"೨೩

ನಭೆಯು ಪ್ರಭೆಯಲಿ ಬೆಳಗಿ ತೊಳಗಲು ದಿವ್ಯ ಘೋಷವು ಮೊಳಗಿತು
ಪ್ರಾಣ ಜ್ಯೋತಿಯು ದೇಹ ತೊರೆದು ಹರಿಯೊಳೈಕ್ಯವದಾಯಿತು
ಸುರರು ಮುನಿಗಳು ಸಕಲ ದಿವಿಜರು ಪುಷ್ಪ ವೃಷ್ಟಿಯ ಕರೆಯಲು
ಶಬರಿ ದೇಹವೆ ಕರ್ಪೂರವಾಯಿತು ರಾಮಗಾರತಿ ಬೆಳಗಲು
ಇಂತು ಪೇಳ್ವೆನು ಶಬರಿ ಕಥೆಯನು ಭಕುತಿ ಮಹಿಮೆಯ ಸಾರಲು ೨೪

ಮಂತ್ರಕೊಲಿಯನು ತಂತ್ರಕೊಲಿಯನು ದೇವ ಭಕುತಿಗೆ ಸುಲಭನು
ಪ್ರೀತಿಯಿಂದಲಿ ಒಮ್ಮೆ ಕರೆದರೆ ರಾಮನೋಡುತ ಬರುವನು
ಹರಿಯೆ ಎನ್ನೊಳಗಿಂತು ಕುಳಿತು ಕಥೆಯ ಬರೆಸಿಹ ಕರದಲಿ
ಯಾರೆ ಪಾಡಲಿ ಯಾರೆ ಕೇಳಲಿ ರಾಮರಕ್ಷೆಯು ದೊರಕಲಿ
ಭುವನಕೆಲ್ಲಕೆ ಶಾಂತಿ ಸೌಖ್ಯವು ಅಖಿಲ ಸುಕೃತವು ಲಭಿಸಲಿ ೨೫

--------------ಶ್ರೀ ರಾಮಕೃಷ್ಣಾರ್ಪಣಮಸ್ತು----------------

ಪುನಶ್ಚೇತನ - ಪುನರುತ್ಥಾನ......

ಸುಮಾರು ೧೦ ತಿಂಗಳ ಹಿಂದೆ ಬರೆದು, ನಂತರ ಹೆಚ್ಚು ಕಡಿಮೆ ಅಸ್ತಿತ್ವವನ್ನೇ ಮರೆತು ಮಲಗಿದ್ದ ಈ ತಾಣಕ್ಕೆ ಪುನಃ ಕಾಯಕಲ್ಪ ಒದಗಿಸಬೇಕು. ವಿಚಿತ್ರ ಅಂತಂದ್ರೆ, ನಾನು ಈ ದಿನಗಳಲ್ಲಿ ಬರೀದೆ ಏನು ಇರ್ಲಿಲ್ಲ.... ಆದರೆ, ಇಲ್ಲಿ ಬರೆಯೋದಕ್ಕೆ ಆಗ್ತಿರ್ಲಿಲ್ಲ ಅಷ್ಟೆ. ಅದರ ಬಗ್ಗೆ ಒಂದು ಅಪರಾಧಿ ಮನೋಭಾವ ನನ್ನಲ್ಲಿ ಈಗಲೂ ಇದೆ. ಈ ಹಿಂದೆ ಬೇಡಿದ್ದ ಆ ಸುಪ್ತ ಚೇತನ ಕಡೆಗೂ ಓ ಗೊಟ್ಟು ಪುನಃ ಸ್ಪಂದಿಸ್ತಾ ಇದೆ. ಇದಕ್ಕೆಲ್ಲ ಸಮಯ ಬರಬೇಕೊ... ಅಥವ ಮನಸ್ಸು ಪಕ್ವವಾಗಬೇಕೋ... ಅಥವ ಇವೆರಡೂ ಒಂದೆನೊ... ನನಗೆ ತಿಳಿದಿಲ್ಲ... ಆದರೆ ಯಾವುದೇ ಕಾರಣಕ್ಕಾಗಲಿ, ಈಗ ಇಲ್ಲಿ ಮತ್ತೆ ಜೀವ ಸ್ಫುರಣೆಯಾಗ್ತಿದೆ.
ಇಲ್ಲಿಗೆ ಬಂದು ಪ್ರೋತ್ಸಾಹ ಕೊಡ್ತಾ ಇದ್ದ ನೀವು, ಬಹುಶಃ ಇದರ ಜಾಡನ್ನ ಮರೆತಿರಬಹುದು.... ನನ್ನ ಪುಣ್ಯಕ್ಕೆ ಮರೀದೆನೂ ಇರಬಹುದು... ಏನೇ ಇರಲಿ... ಅಗಲಿ ಹಾಕಿದ್ದ ಬಾಗಿಲು ಪುನಃ ತೆಗೆದಿದೆ.... ಮರಳಿ ಬಾ ಅತಿಥಿ.... ಹೊಸ ಬಾಳನು ತಾ ಅತಿಥಿ....

Wednesday, February 3, 2010

ಓ ಸುಪ್ತ ಚೇತನ!

ಹಲವು ತಿಂಗಳುಗಳ ಹಿಂದೆ ಬೇಸರದಲ್ಲಿ ಗೀಚಿದ್ದ ಮೊದಲ ನಾಲ್ಕು ಸಾಲುಗಳು, ಹಳೇ ಹಾಳೆಗಳ ಮಧ್ಯೆ ಸಿಲುಕಿ ಕಳೆದು ಹೋಗಿದ್ದು, ಕಣ್ಣಿಗೆ ಬಿತ್ತು. ಅರೆ ಬರೆಯಾಗಿದ್ದ ಭ್ರೂಣಕ್ಕೆ ಪೂರ್ಣ ರೂಪಕೊಟ್ಟು, ನಿಮ್ಮ ಮುಂದೆ ಇರಿಸಿದ್ದೇನೆ.



ಆಗುಹೋಗುಗಳ ನೂಕುನುಗ್ಗಲಿನಲ್ಲಿ
ನಾನಿರುವ ನಾನಾಗಹೊರಟಿರುವ ಇಕ್ಕೆಲದಲ್ಲಿ
ಬಯಕೆಯಾಮಿಷಗಳ ಗೊಂದಲ ಗೋಜಲು.
ಸಿಲುಕಿ ನರಳಿ ಬೆಂಡಾದ ಇರುವನ್ನು
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ನಿನ್ನೆಯ ನಿರ್ಣಯಕೆ ಇಂದೆನಗೆ ಶಿಕ್ಷೆಯೋ?
ಜಡಿದ ಸಂಕೋಲೆಯೊಲು ಹಾರುವ ಪರೀಕ್ಷೆಯೋ?
ಅಗ್ನಿಶಿಖೆ ಧರೆಯಾಗಿ ಕೋಲ್ಮಿಂಚು ಮುಗಿಲಾಗಿ
ರೋದಿಸುತ ಕನಲಿರುವ ಏಕಾಂಗಿ ಮನವನ್ನು
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ನೀನೊಮ್ಮೆ ಸಲಹಿದ್ದೆ, ಮುದ್ದಾಡಿ ಬೆಳೆಸಿದ್ದೆ!
ವಾತ್ಸಲ್ಯ ಭೋರ್ಗರೆಸಿ, ಸತ್ವದ ಸುಧೆಯುಣಿಸಿ,
ಜೀವಿತದ ಅರ್ಥವನು ಗುರುವಾಗಿ ತೋರಿದ್ದೆ
ಇಂದೆಲ್ಲ ಮರೆತಿರುವೆ, ದಾರಿಯನು ತಪ್ಪಿರುವೆನೆಂದೆನ್ನ
ತೊರೆದೆಲ್ಲಿ ಅಡಗಿರುವೆ ಓ ಸುಪ್ತ ಚೇತನ?!

ಎನ್ನ ನಿರ್ವಿಕಾರ ದೈವದ ಅನುಭೂತಿ ನೀನು!
ಎನ್ನ ಸಾಕಾರ ಸಾರ್ಥಕ್ಯ ರೂವಾರಿ ನೀನು!
ಮರಳಿ ಬಾ ಬೇಡುವೆನು... ಶಬರಿಯೊಳು ಕಾಯುವೆನು
ಶಿಲೆಯಾದ ತಮವಾದ ಜಡವಾದ ಜೀವಕೆ ರಾಮನಾಗಿ
ಉದ್ಧರಿಸು ಬಾ, ಉತ್ಸಹಿಸು ಬಾ ಓ ಸುಪ್ತ ಚೇತನ!!


-ಪ್ರವೀಣ

Friday, September 4, 2009

ನಿಮ್ಮ ನೆನಪಿನಲ್ಲಿ......

೩ ವರ್ಷಗಳ ಹಿಂದೆ, ಮಂಗಳಕ್ಕನ ಮನೆಗೆ ರಜೆಗೆ ಹೋಗಿ, ಅಲ್ಲಿಂದ ಮರಳಿ ಬರುವಾಗ ಹೃದಯ ಭಾರವಾಗಿ ಬರೆದ ಸಾಲುಗಳಿವು..... ನಿಮ್ಮನ್ನೆಲ್ಲ... ಮಂಗಳ... ತ್ರಿವೇಣಿ... ಜ್ಯೋತಿ... ಸುಶ್ಮ... ಮನಸ್ಸು.. ಪದೇ ಪದೇ ನೆನಪಿಸಿಕೊಳ್ತಾಯಿರುತ್ತೆ... ನಿಮ್ಮ ನೆನಪಿಗೆ....


ಹೊಸ ಬೆಳಕಿನ ಸುಧೆ ಸವಿಯುವ ಮುಂಜಾನೆಯ ಸಮಯದಿ
ಹೃದಯ ತುಂಬಿ ಬರುತಲಿಹುದು ನಿಮ್ಮ ನೆನಪಿನ ಹರುಷದಿ


ಸಾಗುತಿತ್ತು ಜೀವನ ಗುರಿ ಅರಿಯದಾವುದೋ ಹಾದಿಲಿ
ಅಲ್ಲಿ ನಿಮ್ಮ ಕಂಡು ಬಂದೆ ಮಗುವು ಬರುವ ತೆರದಲಿ
ಎಂತು ಹೋಗುತ್ತಿತ್ತೋ ಅರಿಯೆ ಅರಿವೆ ಕಾಣದಾ ಬದುಕು
ಈಗ ನಿಮ್ಮ ಪ್ರೀತಿ ಕಿರಣ ಅದಕು ಇದಕು ಎದಕು...

ಮನಕೆ ನಿಲುಕದಾಗಿದೆ ಸಂಬಂಧಗಳ ಈ ಒಗಟು
ಕೂಡಿ ಹುಟ್ಟದಿದ್ದರೂ ಬೆಸೆದಿಹುದು ನೇಹ ಸೊಗಡು
ನಿಮ್ಮ ಕೂಡಿ ಕಳೆದ ಆ ದಿನಗಳ ಸವಿ ನೆನಪು
ಮತ್ತೆ ಮತ್ತೆ ತರುತಲಿಹುದು ಹೊಸ ಕಾಂತಿ ಹೊಳಪು

ಇಂತು ಬಾಳ ಪಯಣ ನಡೆಯೆ ನದಿಯು ಹರಿವ ಚಂದದಿ
ಅಡೆ ತಡೆಗಳ ಹಾದಿ ಮೀರಿ ಸೇರುವಂತೆ ಜಲಧಿ!
ನಿಮ್ಮ ನೆನಹಿನ ಸೊಗಸು ಸೆಳೆಯುತಿರಲು ಮನವನು
ಮತ್ತೆ ಬರುವೆ ನಿಮ್ಮ ಸಂಗ ಸವಿಯೆ ಸ್ನೇಹ ಸವಿಯನು!! :)


ಪ್ರೀತಿಯಿಂದ....

ಪ್ರವೀಣ :)

Saturday, July 18, 2009

ಅಪರಾಧಿ ನಾನಲ್ಲ........

ಬೆಂಗಳೂರಿಗೆ ವರ್ಗಾವಣೆಯಾಗಿ ಬಂದು ಸುಮಾರು ೩ ತಿಂಗಳಾಯ್ತು! ಬಂದಾಗಿಂದ, ಬ್ಲಾಗಿಗೆ ಬರಗಾಲ ಬಂದಿದೆ ಅಂತ ಅನ್ನಿಸ್ತಿದೆ. ಇದಕ್ಕೆ ಬ್ಲಾಗ್ ಓನರ್ ಕಾರಣ ಅಂತ ಅನ್ಕೊಳ್ಬಾರ್ದು ಅಂತ ನನ್ನ ಸವಿನಯ ಮನವಿ! ಬರೀಬೇಕು ಅಂತ ಬಹಳ ಸರ್ತಿ ಯೋಚನೆ ಮಾಡ್ದೆ, ಆದರೆ, ಯೋಜನೆ, ಯೋಚನೆ ಹಂತದಲ್ಲೇ ನಿಂತ್ಕೊಂಡುಬಿಡ್ಬೇಕೇ!! ಅದಕ್ಕೂ ಕಾರಣ ನಾನಲ್ಲ! ಊರು, ನಮ್ಮೂರಾದ್ರೂ, ಕೆಲ್ಸ ಅಂತ ಇರುತ್ತೆ ನೋಡಿ! ಹೊಸ ಕಡೆ, ಹೊಸ ವಾತಾವರಣ, ಅಲ್ಲಿನ ಬೇಡಿಕೆಗಳು, ಇವೆಲ್ಲ ತಲೆ ತುಂಬ. ಅದೂ ಅಲ್ದೆ, ಆ ಕಾಟ್ ಜಾಗದಿಂದ ಇನ್ನೂ ಪೂರ್ತಿಯಾಗಿ ಸಾಮಾನುಗಳನ್ನೆಲ್ಲ.. ಸಾಗಿಸಿರ್ಲಿಲ್ಲ.. ಒಂದೆರಡು ವಾರ ಅದರ ಓಡಾಟ ಆಯ್ತು, ಅದಾದ್ಮೇಲಾದ್ರೂ ಬರೀಬಹುದಿತ್ತಲ್ಲ ಅಂತ ಕೇಳ್ತೀರ... ನಿಜವೇ... ಆದ್ರೆ, ವಾರಾಂತ್ಯದಲ್ಲೇ ಬರೀಬೇಕು ಅಂತ.. ಏನೋ ಒಂದು ಚಟ.. ಯಾವಾಗ್ಲೋ ಬರೋ ಯೋಚನೆಗಳಿಗೆಲ್ಲ, ವಾರಾಂತ್ಯದಲ್ಲೇ ಬಾ..ಅಂತ ಹೇಳಿದ್ರೆ.. ಅವೂ ನನ್ಮಾತು ಕೇಳ್ಬೇಕಲ್ಲ! ತಮ್ಮದೇ ಹಟ...ತಮ್ಮದೇ ದಾರಿ ಇವಕ್ಕೆ!

ವಾರಾಂತ್ಯ ನನಗೊಬ್ಬನಿಗೇ ಅಂತಂದ್ರೆ, ಅದೊಂದು ವಿಷ್ಯ, ಆದರೆ, ಅದು ಎಲ್ಲರಿಗೂ ವಾರಾಂತ್ಯನೇ ಅಲ್ವ?! ಸರಿ, ಬರೆಯೋದರ ಜೊತೆಗೆ, ಸುತ್ತಾಡೋದು, ಮಾತಾಡೋದು, ಬಂಧು, ಬಳಗ ಎಲ್ಲ ಸೇರ್ಕೊಂಡು ಬಿಡುತ್ವೆ, ಏತನ್ಮಧ್ಯೆ, ಡಿ.ವಿ.ಜಿ ಅವರು ಹೇಳೋ ಹಾಗೆ, ತಲೆನಲ್ಲಿ ಕಾಗೆ, ಗೂಬೆ, ಕೋಗಿಲೆ, ನವಿಲು, ಗುಬ್ಬಚ್ಚಿ, ಎಲ್ಲಾ ಕೂಗುಗಳು ಸೇರಿ ಹೋಗಿ, ಈ ಗದ್ದಲದಲ್ಲಿ, ಪಾಪ ಬರವಣಿಗೆಗೆ ಬೇಕಿರೋ ಸ್ಫೂರ್ತಿ ಅನ್ನೋ ಮರಿಯ ಸದ್ದು ಎಲ್ಲೋ ಅಡಗಿಹೋಗುತ್ತೆ! ಈ ಮರಿ ಬೆಳೆದು, ಆ ಬೇರೆ ಎಲ್ಲಾ ಗದ್ದಲಗಳನ್ನೂ ಮೀರಿ ಗಲಾಟೆ ಮಾಡೋಕೆ, ಇಷ್ಟು ದಿನ ಬೇಕಾಯ್ತು ನೋಡಿ!

ಅಂತೂ, ಇಂತೂ ಸದ್ಯ ಬಂತಲ್ಲ!! ಏನೋ ಒಂದಷ್ಟು ಮಾತುಗಳಿಗೆ, ಪದಗಳ ರೂಪ ಕೊಟ್ಟು, ಕೀಲಿಮಣೆ ಮೇಲೆ ಟಕಟಕಿಸಿದ್ದು ಆಯ್ತು. ಇನ್ಮುಂದೆ, ಹೀಗೆಲ್ಲ, ಧೂಳು ಹಿಡಿಯೋಕೆ ಆಸ್ಪದ ಕೊಡಲ್ಲ... ಏನೋ ಒಂದು... ಹರಟ್ತಾಯಿರ್ತೀನಿ... ಕೇಳೋದು, ಓದೋದು.. ನಿಮಗೆ ಬಿಟ್ಟಿದ್ದು ಅಷ್ಟೇ! :)

Thursday, April 2, 2009

ಋಣವೆಂಬ ಸೂತಕ

"ಎಲ್ಲ ಮರೆತಿರುವಾಗ....ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ".. ಕೇಳ್ತಾಯಿದ್ದೆ. ಅದೆಷ್ಟು ಸರ್ತಿ ಈ ಹಾಡು ಕೇಳಿದ್ದೀನೋ, ಲೆಕ್ಕ ಇಟ್ಟಿಲ್ಲ. ಆದರೆ ಪ್ರತೀ ಬಾರೀ ಕೇಳಿದಾಗಲೂ ಹೃದಯ ಭಾರಿ ಆದದ್ದುಂಟು. ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ, ಎಷ್ಟೋ ಕಳಚಿ ಹೋಗುತ್ವೆ, ಆದರೆ ಈ ನೆನಪುಗಳ ಋಣವನ್ನ ಹೆಗಲ ಮೇಲೆ ಹೊರಿಸಿಬಿಟ್ಟು ಹೋಗುತ್ವೆ. ಸಂಬಂಧಗಳೇ ಹೀಗೆ ಅಂತ ಅನ್ಕೊಂಡು ಯಾವುದನ್ನೂ ಅಂಟಿಸಿಕೊಳ್ದೆ ಸುಮ್ನೆ ಇದ್ಬಿಡ್ಬಹುದೇನೋ... ಆದರೆ ಹೃದಯ ಕೇಳ್ಬೇಕಲ್ವ? ಅದಕ್ಕೆ ಈ ನೆನಪುಗಳೂ ಬೇಕು, ಅವು ಕೊಡೋ ಕಹಿ, ಸಿಹಿ ರುಚಿಯೂ ಬೇಕು. ಒಂದನ್ನ ತಗೊಂಡ್ರೆ ಇನ್ನೊಂದು ಫ್ರೀ!
ನೆನಪು ತಾನೆ? ಈ ಋಣದಲ್ಲಿ ಕೆಲವೊಂದನ್ನ ಇಟ್ಕೊಂಡು, ಮಿಕ್ಕಿದ್ದನ್ನ ಮರ್ತುಬಿಟ್ರಾಯ್ತು ಅಂತ ಸಲೀಸಾಗಿ ತಪ್ಪಿಸಿಕೊಳ್ಳೋ ಜಾಯಮಾನ ನಂದು. ಆದರೆ, ಬೆನ್ನು ಹತ್ತಿರೋ ಸಾಲಗಾರರ ಥರ, ಒಂದಲ್ಲ ಒಂದು ಮೂಲೆನಲ್ಲಿ, ಎಲ್ಲೋ ತಿರುವಿನಲ್ಲಿ, ಹಿಡಿದುಬಿಡುತ್ತೆ, ಪುನಃ ಹಿಂದಿನ ಕಡತಗಳನ್ನೆಲ್ಲಾ ತೆರೆದಿಡುತ್ತೆ. ನಾ ಮಾಡಿದ್ದು, ತಾ ಮಾಡಿದ್ದು, ಎಲ್ಲಾ ದಾಖಲೆಗಳೂ ಆಚೆ, ತಕ್ಕಡಿನಲ್ಲಿ ಎರಡನ್ನೂ ಹಾಕಿ, ತಪ್ಪು ಒಪ್ಪುಗಳನ್ನ ಅಳೆಯೋ ಸರದಿ ಆಗ. ತಕ್ಕಡಿ ಸಮನಾಗಿ ಇರೋ ಪ್ರಸಂಗಗಳೇ ಕಡಿಮೆ... ಬಹಳಷ್ಟು ಸರ್ತಿ ಏರುಪೇರು! ಹೀಗೆ ಆದಗಲೇನೇ, ಯಾರು ಯಾರಿಗೆ ಎಷ್ಟೆಷ್ಟು ಲೆಕ್ಕ ಚುತ್ತಾ ಮಾಡ್ಬೇಕು ಅನ್ನೋ ಬಾಬ್ತು ಬರೋದು.
ಬಹಳ ಋಣಗಳು ಹೀಗೇ ಹೆಗಲ ಮೇಲೆ ಹೊತ್ಕೊಂಡ್ರೆ, ಮನುಷ್ಯ ಮುಂದೆ ನಡೆಯೋದಾದ್ರೂ ಹೇಗೆ? ಹಗುರವಾದ ನೆನಪುಗಳು, ಸವಿ ನೆನಪುಗಳು ಬೇಕು... ಅದಕ್ಕೆ ಸಂಬಂಧಗಳು ಹಸನಾಗಿ ಕೂಡಬೇಕು.. ಹೀಗೆ ಕೂಡಬೇಕು ಅಂದ್ರೆ, ಸಂಬಂಧದಲ್ಲಿ ನಾನು ನೀನು ಬಿಟ್ಟು, ನಾವು ಅನ್ನೋದು ಬರ್ಬೇಕು. ಅದು ಎಲ್ಲಾ ಸಂಬಂಧದಲ್ಲಿ ಬರೊಲ್ಲ, ಎಲ್ಲರ ಜೊತೆ ಆಗೊಲ್ಲ. ಹೀಗಾಗಿನೇ, ನೆನಪುಗಳ ಋಣವೆಂಬ ಸೂತಕ ಬಲು ಭಾದೆಗೊಳಿಸುತ್ತೆ... ಇದನ್ನ ಪರಿಹರಿಸೋ ಗುಣದ ’ನಿಧಿ’ ಕೂಡ ನಮ್ಮೊಳಗೇ ಇದೆ!